Literature

ಧರ್ಮಮೂರ್ತಿ ಶ್ರೀರಾಮ

ಹಿಂದು ಸಂಸ್ಕೃತಿಯ ಆದರ್ಶ ವ್ಯಕ್ತಿಯು ಶ್ರೀರಾಮನು.
‘ರಾಮೋ ವಿಗ್ರಹವಾನ್ ಧರ್ಮಃ’ – ಧರ್ಮದ ಮೂರ್ತಿಯೇ ರಾಮನು.
‘ಶ್ರೀರಾಮವದ್ವರ್ತಿತವ್ಯಂ ಸ ಧರ್ಮಃ’ ರಾವಣವದ್ವರ್ತಿತವ್ಯಂ ಸೋಽಧರ್ಮಃ’ – ಶ್ರೀರಾಮನಂತೆ ವರ್ತಿಸುವದು ಧರ್ಮ; ರಾವಣನಂತೆ ವರ್ತಿಸುವದು ಅಧರ್ಮ. ಧರ್ಮ- ಅಧರ್ಮಗಳ ಈ ವ್ಯಾಖ್ಯೆ ಬಲ್ಲವರು ವಿಶ್ವದ ಮಾರ್ಗದರ್ಶನಕ್ಕಾಗಿಯೇ ಮಾಡಿರುವರು.

ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮನು. ಶ್ರೀರಾಮನು ಧರ್ಮಪಾಲನೆಗೆ ಬದ್ಧಕಂಕಣನಾಗಿ ನಡೆದು ಕೊಳ್ಳುವದನ್ನು ನೋಡಿದರೆ ಇದು ವಿಶ್ವ ಭೋಧನೆಗಾಗಿಯೇ ಎಂದು ಗ್ರಹಿಸಬೇಕಾಗಿ ಬರುವದು. ಅವನ ಚರಿತ್ರದಲ್ಲಿ ಅಡಗಿರುವ ಈ ಹೇತುವನ್ನು ನಾವು ತಿಳಿದು ವರ್ತಿಸಿದರೆ ಅವನ ಅನುಗ್ರಹವಾಗಿ ಹಿಂದುಸ್ಥಾನದ ರಾಜ್ಯವು ರಾಮರಾಜ್ಯವಾಗುವದು ನಿಃಸಂದೇಹ!

‘ತಪಃ ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಂ|
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಂ|| (ವಾಲ್ಮೀಕಿ ರಾಮಾಯಣ, ಬಾ. ಸರ್ಗ ೧, ಶ್ಲೋಕ ೧)
ಶ್ರೀರಾಮಾಯಣದ ಆರಂಭ ಈ ಶ್ಲೋಕದಿಂದಲೇ ಆಗಿದೆ. ಶ್ರೀ ವಾಲ್ಮೀಕಿ-ನಾರದರ ಮುಂದಿನ ಪ್ರಶ್ನೋತ್ತರಗಳಿಗೆ ಈ ಶ್ಲೋಕವೇ ಉಗಮ!

ವಾಲ್ಮೀಕಿ – ‘ಈ ಕಾಲದಲ್ಲಿ ಇಡೀ ವಿಶ್ವದಲ್ಲಿ
ಗುಣಾಢ್ಯನೂ, ಪರಾಕ್ರಮಶಾಲಿಯೂ, ಧರ್ಮಜ್ಞನೂ, ಕೃತಜ್ಞನೂ, ಸತ್ಯಸಂಧನೂ, ಸತ್ಯಸಂಕಲ್ಪನೂ, ಸಚ್ಚರಿತ್ರನೂ, ಸರ್ವಭೂತ ಹಿತೈಶಿಯೂ ಎಂದು ಹೇಳಿಸಿಕೊಂಡಿರುವಾತನಾವನು?

ವಿದ್ವಾಂಸನೂ, ಸಮರ್ಥನೂ, ವಿಶ್ವಮೋಹಕನೂ, ಧೈರ್ಯವಂತನೂ, ಜಿತಮನಸ್ಕನೂ, ಆತ್ಮನಿಷ್ಟನೂ ಯಾವಾತನಿಹನು?
ಜಿತಕ್ರೋಧನೂ, ಅತ್ಯಂತ ತೇಜಸ್ವಿಯೂ, ಗುಣಗ್ರಾಹಿಯೂ ಆಗಿರತಕ್ಕವನಾರು?

ಕೋಪಗೊಂಡರೆ ದೇವತೆಗಳೂ ಸಹ ಯಾವಾತನಿಗೆ ಹೆದರುವರೋ ಅಂತಹನಾವನು? ಅವನೆಲ್ಲಿಹನು?’
ಶ್ರೀ ವಾಲ್ಮೀಕಿಯವರ ಈ ಪ್ರಶ್ನೆಗಳಿಗೆ ನಾರದರ ಉತ್ತರ ಮುಂದೆ ನೋಡೋಣ

home-last-sec-img