Literature

ನಿಮ್ಮ ತಾಪ ಶಮನವಾಗಲಿ! ಎಲ್ಲರೂ ಸುಖಿಗಳಾಗಲಿ!

ಸಕಲ ಪ್ರಾಣಿಗಳಲ್ಲಿಯೂ ಪರಮಾತ್ಮನು ‘ನಾನು’ ಎಂಬ ರೂಪದಲ್ಲಿ ಇರುವನಲ್ಲವೇ?

ನಿವೃತ್ತಿ ಮಾರ್ಗದಿಂದಲೇ ಆಗಲಿ, ಪ್ರವೃತ್ತಿಮಾರ್ಗದಿಂದಲೇ ಆಗಲಿ, ಈ ಸತ್ಯವನ್ನರಿತೇ ಪ್ರಪಂಚದ ವ್ಯಾಪಾರಗಳನ್ನು ಸಾಗಿಸಬೇಕು.
ಭಿನ್ನ-ಭಿನ್ನ ವ್ಯವಹಾರಗಳನ್ನು ನಡೆಯಿಸಿರುವಾಗ ಆ ಏಕಮಾತ್ರ ಸ್ವರೂಪವನ್ನು ಮರೆಯಲಾಗದು.

ಪ್ರಪಂಚ ನಾಟಕದಲ್ಲಿ ಕೈಕೊಂಡಿರುವ ಭಿನ್ನ-ಭಿನ್ನ ಭೂಮಿಕೆಗಳನ್ನು ಆಯಾ ಪಾತ್ರ, ಸಂದರ್ಭಗಳಿಗೆ ತಕ್ಕಂತೆ ಅಭಿನಯಿಸಬೇಕು.
ಆಗ ಅನುಭವಿಸುವ ಸುಖ-ದುಃಖಗಳೆಲ್ಲವೂ ಸುಳ್ಳು ಎಂಬುದನ್ನು ಮಾತ್ರ ಮರೆಯಲಾಗದು. ಅಂತಾದರೆ ಸತ್ಯಸೃಷ್ಟಿಯು ತಾನೇ ಗೋಚರವಾಗುವದು. ಮನುಷ್ಯನದೇಹ ಮಿಥ್ಯೆ. ಅದರ ಕಾರ್ಯಗಳೂ ಮಿಥ್ಯೆ!
ಇದೇ ನಿಜವಾದಅರಿವು!

ಮನುಷ್ಯದೇಹಕ್ಕೆ ಇಂದ್ರಿಯಗಳ ಮೂಲಕ ಸುಖಪಡಿಸಲು ಎಷ್ಟೆಷ್ಟು ಯತ್ನಿಸುವೆವೋ ಅದು ಅಷ್ಟಷ್ಟು ನಿಕೃಷ್ಟಾವಸ್ಥೆಯನ್ನು ಹೊಂದುವದು. ಹಾಗೆ ಪ್ರಪಂಚ ಸುಖಕ್ಕೆ ಮನಸೋತು ನಡೆಯುವರ ಪಾಡು ದಿನದಿನಕ್ಕೆ, ಕ್ಷಣಕ್ಷಣಕ್ಕೆ ಅಧೋಗತಿಗಿಳಿಯುತ್ತ ಸಾಗುವದು.

ಕೇವಲ ಆತ್ಮ ವಸ್ತುವಿನಲ್ಲಿ ಲಕ್ಷವಿಟ್ಟು ನಡೆದು, ಆ ಆತ್ಮ ಸ್ವರೂಪವನ್ನು ಅರಿತು ಆತ್ಮಜ್ಞಾನಸಂಪನ್ನನಾಗಿ ಬಾಳಲು ಹವಣಿಸಬೇಕು.
ನಾನು ನಿಮಗೆ ತೀರ್ಥಕೊಡುತ್ತೇನೆ. ಮಂತ್ರಾಕ್ಷತೆ ಕೊಡುತ್ತೇನೆ. ಭಸ್ಮ ಕೊಡುತ್ತೇನೆ. ಇವೆಲ್ಲಾ ಏನು?

ಇವೆಲ್ಲಾ ಆ ಪರಮಾತ್ಮನ ಅರಿವಿಗಾಗಿ ನಿಮಗೆ ಕೊಡುವ ಔಷಧೋಪಚಾರಗಳು. ನೀವು ಪ್ರಪಂಚದ ತಾಪ-ವ್ಯಾಪಗಳ ವ್ಯಾಧಿಯಿಂದ ಬಳಲುತ್ತಿದ್ದೀರಿ. ಆ ರೋಗ ನಿವಾರಣೆಗಾಗಿ ನಾನು ಚುಚ್ಚುಮದ್ದು ಚುಚ್ಚಬೇಕಾಗಿದೆ. ಈ ವಿಚಾರವನ್ನು ನಾನು ತಿಳಿದುಕೊಂಡಿದ್ದೇನೆ. ನಿಮಗೂ ಅದು ತಿಳಿಯಲಿ.
ನಿಮ್ಮ ಬೇನೆ ವಾಸಿಯಾಗಲಿ! ಎಲ್ಲರೂ ಸುಖಿಗಳಾಗಲಿ!

home-last-sec-img