Literature

ಭಗವಂತನ ಸಂಕಲ್ಪಮಾತ್ರದಿಂದ ಸೃಷ್ಟಿ

ಇದು ಶ್ರುತಿವಾಕ್ಯ.

ಸ ತಪೋsತಪ್ಯತ| ಸತಪಸ್ತಪ್ತ್ವಾ| ಇದಂ ಸರ್ವಮಸೃಜತ|
ಯದಿದಂ ಕಿಂಚ| ತತ್ಸೃಷ್ಟ್ವಾ| ತದೇವಾನು ಪ್ರಾವಿಶತ್|
ಇಲ್ಲಿ ‘ಆಲೋಚನಾಖ್ಯಂ ತಪಃ’
ಪರಮಾತ್ಮನು ಜಗತ್ತನ್ನು ಸೃಷ್ಟಿಸಬೇಕು ಎಂದು ಸಂಕಲ್ಪ ಮಾಡಿದನು. ಆ ಸಂಕಲ್ಪಮಾತ್ರದಿಂದ ಜಗತ್ತು ಸೃಷ್ಟಿಯಾಗಿ ಹೋಯಿತು. ಇಷ್ಟೇ ಅವನ ತಪಸ್ಸು.

‘ಇಚ್ಛಾಮಾತ್ರಂ ಪ್ರಭೋ ಸೃಷ್ಟಿಃ|’ ಇಚ್ಛೆಯಿಂದಲೇ ಸೃಷ್ಟಿಯಾಯಿತು!
ಇನ್ನೊಂದು ಕಡೆ ಶ್ರುತಿ ಹೇಳಿದೆ.
‘ಸ ಈಕ್ಷತ ಲೋಕಾನ್ನು ಸೃಜಾ ಇತಿ|’
ಇಲ್ಲಿ ‘ಈಕ್ಷಣಾಖ್ಯಂ ತಪಃ’

ಪರಮಾತ್ಮನು ಸೃಷ್ಟಿಯನ್ನು ‘ನೋಡಿದನು, ಭಾವಿಸಿದನು’ ಕೂಡಲೇ ಅದರ ಸೃಷ್ಟಿಯಾಯಿತು.
ಒಟ್ಟಿಗೆ ಪರಮಾತ್ಮನ ಸಂಕಲ್ಪದಿಂದಲೇ ಈ ಸೃಷ್ಟಿಯ ಉತ್ಪತ್ತಿಯಾಯಿತು ಎಂಬುದೇನೋ ನಿಜ.

ವಸ್ತುವಿನ ಸೃಷ್ಟಿಗೆ ಸಂಕಲ್ಪ ಬೇಕಾಗಿರುವಂತೆ ಸಾಧನವೂ ಬೇಕು. ಮಣ್ಣಿನ ಗಣಪತಿ ಮಾಡ ಲಿಕ್ಕೆ ಸಂಕಲ್ಪವೂ ಬೇಕು, ಮಣ್ಣೂ ಬೇಕು. ಹಾಗೆ ಸೃಷ್ಟಿಯ ಉತ್ಪತ್ತಿಗೆ ಸಾಧನ ಬೇಕಷೇ್ಟ? ಆದರೆ ಪರಮಾತ್ಮನ ಸಂಕಲ್ಪಕ್ಕೆ ಅನ್ಯ ಸಾಧನಗಳೇ ಬೇಕಾಗಿಲ್ಲ. ಅವನ ಸಂಕಲ್ಪವೇ ಸಾಧನರೂಪವಾಗಿ ಮಾರ್ಪಟ್ಟಿತು. ಅವನು ಸರ್ವಸಮರ್ಥನು. ಅವನ ಸಂಕಲ್ಪಮಾತ್ರದಿಂದಲೇ ಸೃಷ್ಟಿಗೆ ಬೇಕಾದ ಸಾಧನಗಳೆಲ್ಲಾ ಉಂಟಾದವು.

‘ಯಥೋರ್ಣ ನಾಭಿಃ ಸೃಜತೇ ಗೃಹ್ಣತೇಚ ತಥಾಕ್ಷರಾತ್ಸಂಭವತೀಹವಿಶ್ವಂ|’

ಹೇಗೆ ಜೇಡ ಹುಳ ತನ್ನಿಂದಲೇ ತನ್ನ ಬಲೆಯನ್ನು ಸೃಷ್ಟಿಸುವದೋ ಹಾಗೆಯೇ ಪರಮಾತ್ಮನು ತನ್ನ ಸಂಕಲ್ಪದಿಂದಲೇ ಈ ದೃಶ್ಯಮಾನ ಸಕಲ ಸೃಷ್ಟಿಯನ್ನೂ, ಈ ವಿವಿಧ ವೈಚಿತ್ರದಿಂದ ಕೂಡಿದ ಜಗತ್ತನ್ನೂ ಸೃಷ್ಟಿಸಿದನು!

home-last-sec-img